ಬೆಂಗಳೂರಿನ ಹೆಬ್ಬಾಳದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ಒಂಬತ್ತನೇ ತರಗತಿಯ ಬಾಲಕಿಯು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಕಸ ಸಾಗಣೆ ವಾಹನಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾಳೆ. ಪಾದಚಾರಿಗಳು ರಸ್ತೆ ದಾಟಲು ನಿರ್ಮಿಸಲಾಗಿರುವ ಕೆಳಸೇತುವೆಯಲ್ಲಿ ತುಂಬಿದ್ದ ಮಳೆನೀರನ್ನು ಬಿಬಿಎಂಪಿ ತೆರವುಗೊಳಿಸದಿದ್ದುದರಿಂದ, ಬಾಲಕಿ ಮುಖ್ಯರಸ್ತೆ ದಾಟಿ ಸಾವಿನ ದವಡೆಗೆ ಸಿಲುಕಬೇಕಾಯಿತು ಎಂಬುದು ಸ್ಥಳೀಯರ ಅಭಿಪ್ರಾಯ. ‘...ಕೆಳ ಸೇತುವೆಯಲ್ಲಿ ಹೆಚ್ಚು ನೀರಿರಲಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿಕೆ ನೀಡಿದ್ದಾರೆ ಅರ್ಥಾತ್, ವಿದ್ಯಾರ್ಥಿನಿ ರಸ್ತೆ ದಾಟುವ ಧೈರ್ಯ ಮಾಡದೆ ‘ಸ್ವಲ್ಪ ನೀರಿದ್ದ’ ಕೆಳ ಸೇತುವೆಯನ್ನು ಬಳಸಬೇಕಿತ್ತು ಎಂಬುದು ಅವರ ಮಾತಿನ ಇಂಗಿತ. ತಮ್ಮ ಅಸಮರ್ಪಕ ಕರ್ತವ್ಯ ನಿರ್ವಹಣೆಗೆ ಹೈಕೋರ್ಟ್ನಿಂದ ಪದೇಪದೇ ಕಟುಟೀಕೆಗೆ ಗುರಿಯಾಗುತ್ತಿರುವ ಮತ್ತು ಇತ್ತೀಚೆಗೆ ತಾನೇ ಪ್ರಕರಣವೊಂದರಲ್ಲಿ ಕ್ಷಮೆಯಾಚಿಸಿರುವ ಮುಖ್ಯ ಆಯುಕ್ತರು, 14 ವರ್ಷದ ಬಾಲಕಿಯಲ್ಲಿ ‘ರಸ್ತೆ ದಾಟುವ ದುಸ್ಸಾಹಸ’ವನ್ನು ನಿರೀಕ್ಷಿಸುವುದು ಎಷ್ಟು ಸಮಂಜಸ?